Friday, 16 December 2016

ಗುಬ್ಬಿ ಮತ್ತೊಮ್ಮೆ ಗಿಜಗುಡುತ್ತಿದೆ ಕೇಳಿದಿರಾ ???



Image result for cute sparrows wallpaper
ನೀವು ನೂರಕ್ಕೆ ನೂರು ಈ ಮಾತುಕತೆಯನ್ನು ಕೇಳಿರುತ್ತೀರ, ಅಥವಾ ನೀವೇ ಇದರಲ್ಲಿ ಭಾಗಿಯಾಗಿರುತ್ತೀರ ! ಆ ಮಾತುಕತೆ ಗುಬ್ಬಿಗಳ ಬಗ್ಗೆ ! ಗುಬ್ಬಿ ನಮ್ಮೆಲ್ಲರ ಬಾಲ್ಯದ ಗೆಳೆಯ , ನಾವು ಗುಬ್ಬಿ ಗೂಡುಕಟ್ಟುವುದನ್ನು ಅಲ್ಲಿಲ್ಲಿ ಬಿದ್ದ ಕಾಳುಕಡ್ಡಿ ತಿನ್ನುವುದನ್ನು ನೋಡಿರುತ್ತೇವೆ. ದಸರೆಯ ರಜೆಯಲ್ಲೋ ಬೇಸಿಗೆಯ ಬಿಸಿಲಲ್ಲೋ ಅಮ್ಮ ಅಕ್ಕಿ ನುಚ್ಚು ಒಣಗಿಸಿದರೆ , ಗೋಧಿ ಹರಡಿದರೆ ನಮ್ಮನ್ನು ಕಾಯಲು ಬಿಟ್ಟುಹೋಗುವುದು ವಾಡಿಕೆ ! ಕಾಗೆ ಓಡಿಸುವ ನಾವು, ದನ ಕರು ತಿನ್ನಲು ಬಂದರೆ ಬಿಡದವರು ಒಂದುವೇಳೆ ಗುಬ್ಬಿಗಳು ಬಂದು ತಿಂದರೆ ಸುಮ್ಮನಿರುತ್ತಿದ್ದೆವಲ್ಲ ಯಾಕೆ ? ಅವುಗಳ ಗಾತ್ರನೋಡಿ ಇವು ಇನ್ನೆಷ್ಟು ತಿಂದಾವು ಎಂಬ ಸಹಾನುಭೂತಿಯಾ ? ಅವುಗಳ ಮೇಲಿನ ಪ್ರೀತಿಯಾ ?  


" ಈಗಂತೂ ಗುಬ್ಬಿಗಳೇ ಇಲ್ಲ ! ಈ ಮೊಬೈಲು ನೆಟ್ವರ್ಕ್ ರೇಡಿಯೇಶನ್ ನಿಂದ ಎಲ್ಲ ಸತ್ತು ಹೋಗುತ್ತಿವೆ ಸೂಕ್ಷ್ಮ ಜೀವಿಗಳು ನೋಡಿ, ಎಲ್ಲಿ ತಡೆದಾವು ?! ನಮಗೇ ತಲೆನೋವು ಬರುತ್ತದೆ ಇನ್ನು ಪಾಪ ಅವು ಏನುಮಾಡಿಯಾವು !" ಎಂಬುದು ನಮ್ಮೆಲರ ಸರ್ವೇಸಾಮಾನ್ಯ ನಿಲುವು. " ಗಿಜಿಗಿಜಿ ಗುಟ್ಟುವ ಶಹರಗಳಲ್ಲಿ ಗುಬ್ಬಿಗಳಿಗೆಲ್ಲಿದೆ ಜಾಗ ? ಜನಗಳೇ ಗುಬ್ಬಿಗಳಂತೆ ಒಬ್ಬರಮೇಲೊಬ್ಬರು ಒತ್ತರಿಸಿ ಜೀವಿಸುತ್ತಿರುವಾಗ " ! ಆದರೆ ಒಮ್ಮೆ ನಿಮ್ಮ ಶಹರದಿಂದ ಒಂದಷ್ಟು ಕಿಲೋಮೀಟರು ದೂರ ಸಾಗಿ, ಅಗಲವಾಗಿ ಕಣ್ಣು ಬಿಡಿ ! ಅಲ್ಲಲ್ಲಿ ಮರದಪೊಟರೆಯಲ್ಲೋ, ಮನೆಯ ಜಂತೆಯಲ್ಲೋ, ಬೇಲಿಯಲ್ಲೋ ಗುಬ್ಬಿಗಳು ಈಗಲೂ  ಗಿಜುಗುಟ್ಟುತ್ತಿರುತ್ತವೆ ! ನೋಡುವ ಧಾವಂತ ಮತ್ತು ವ್ಯವಧಾನ ಬೇಕಷ್ಟೆ !

ಗುಬ್ಬಿಗಳು ವಿಕಿರಣಗಳಿಗಿಂತಾ ಪರಿಪಾಟಲು ಪಡುತ್ತಿರುವುದು ತಂಪನೆರೆವ ಮರಗಳಿಲ್ಲದೆ , ಕುಡಿಯಲು ನೀರಿನ ಹೊಂಡಗಳಿಲ್ಲದೆ , ತಿನ್ನಲು ಕಾಳುಕಡ್ಡಿ ಗಳು ಸಿಗದೆ ! ಅಭಿವೃದ್ದಿಗಾಗಿ ಮರಗಳ ಕಡಿದು , ಕೆರೆ ಹೊಂಡಗಳನು ಆವರಿಸಿಕೊಂಡು ಕಟ್ಟಡಗಳ ಕಟ್ಟುತ್ತಿರುವುದರಿಂದ ! ಬಿಸಿಲು ಹೆಚ್ಚಾಗಿ ಕುಡಿವ ನೀರಿಲ್ಲದೆ ಹಾರುವ ಗುಬ್ಬಿಯ ಎದೆ ನಿಮಿಷಕ್ಕೆ  ನಾನೂರ ಐವತ್ತು ಬಾರಿ ಹೊಡೆದುಕೊಳ್ಳುವಾಗ ಗಾಳಿಯಲ್ಲಿನ ಇಂಗಾಲದ ಆಕ್ಸೈಡ್ ಮತ್ತು ಡೈಆಕ್ಸೈಡ್ ಅದರ ಎದೆಹೊಕ್ಕರೆ ಏನಾಗಬೇಡ ???
ಮೊದಲೇ ಸೂಕ್ಷ್ಮ ಜೀವಿ ಪಾಪ  !

ಚಿಕ್ಕಂದಿನಲ್ಲಿ ಗುಬ್ಬಿ ಕೈಗೆಸಿಗುವಷ್ಟು ಹತ್ತಿರವಿದ್ದರೂ ನಾವು ಅದನ್ನು ಮುಟ್ಟುತ್ತಿರಲಿಲ್ಲ,  ಕಾರಣ " ಗುಬ್ಬಿ ಭ್ರಾಹ್ಮಣ ನಂತೆ ! ಅದನ್ನು ಮನುಷ್ಯರು  ಮುಟ್ಟಿದರೆ ಅದರ ಸಂಕುಲಕ್ಕೆ ಹೇಗೋ ಅದು ಗೊತ್ತಾಗಿ ಅದನ್ನು ಸಾಯಿಸಿಬಿಡುತ್ತದೆಂಬ ಸ್ಥಾಪಿತ ( ಒಳ್ಳೆಯದೇ ) ಭಯದಿಂದ " ! ಇದು ನಮ್ಮ ಹಿರಿಯರು ಅವರ ಹಿರಿಯರು ಗುಬ್ಬಿ ಎಂಬ ಸೂಕ್ಷ್ಮ ಜೀವಿಯನ್ನು ರಕ್ಷಿಸಲು ಅನುಸರಿಸುತ್ತಿದ್ದ ಮಾರ್ಗೋಪಾಯ ! ಈ ಹಿರಿಯರೇ ಮರಗಿಡ ನೆಟ್ಟವರು, ಕೆರೆ ಕಟ್ಟೆ ಮಾಡಿದವರು , ಬೇಸಿಗೆಯಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ತಣ್ಣೇರು ಹೊಂಡ ಕೊರೆದು ನೀರು ತುಂಬಿಸಿದವರು, ಅಲ್ಲಲ್ಲಿ ಸುಖಾ ಸುಮ್ಮನೆ ಕಾಳು ಕಡ್ಡಿ ಚಲ್ಲಿದವರು ! 

ನಾವೋ ಸ್ಟೀಲ್ ಫ್ಲೈಓವರ್ ಗಳಿಗಾಗಿ , ರಸ್ತೆ ಅಗಲೀಕರಣ ಕ್ಕಾಗಿ, ಪಾರ್ಕಿಂಗ್ ಗಾಗಿ ಕೆಲವೊಮ್ಮೆ ಏನೂ ಕಾರಣವಿರದೆ   ಸಾವಿರ ಸಾವಿರ ಮರಗಳ ಮುಲಾಜಿಲ್ಲದೆ  ಕಡಿವವರು ! ಅವುಗಳ  ಸಂಖ್ಯೆ ಕ್ಷೀಣಿಸಹೊರಟಿರುವಾಗ ಅದನ್ನು ವಿಕಿರಣದ ಮೇಲೆ ದೂಡಿ ಸುಮ್ಮನಾಗುತ್ತೇವೆ ! UV ಮತ್ತು IR ವಿಕಿರಣಗಳ್ಳನ್ನು ಸಾವಿರಾರು ವರ್ಷಗಳಿಂದ ಸಹಿಸಿರುವ ಗುಬ್ಬಿಗೆ ಬೇಕಿರುವುದು ಒಂದು ಮರ , ಒಂದಷ್ಟು ಕಾಳು ಕಡ್ಡಿ ಮತ್ತು ಕುಡಿಯಲು ಗುಟುಕು ನೀರು !

ವಿಶೇಷ ಸೂಚನೆ : ನೇತ್ರಾವತಿ ತಿರುವು ಯೋಜನೆಯಡಿಯಲ್ಲಿ ಸರ್ಕಾರ ಸಾವಿರಾರು ಮರಗಳನ್ನು ಕೆಳಗುರುಳಿಸಲು ಸಿದ್ದವಾಗಿರುವ ಬೆನ್ನಲ್ಲೇ  ಬೈರಾಪುರ -ಶಿಶಿಲ ರಸ್ತೆಯ ಕೆಲಸ ಶುರುವಾಗಿದೆಯಂತೆ ಇದರಿಂದ ಮೂಡಿಗೆರೆ ಮತ್ತು ಉಜಿರೆಯ ಹಾದಿ ಇಪ್ಪತೊಂಬತ್ತು (೨೯) ಕಿಲೋಮೀಟರು ಕಡಿಮೆಯಾಗಿತ್ತದೆಯಂತೆ !   ಇದು ಪೂರ್ಣವಾಗುವುದರ ಒಳಗೆ ಐವತ್ತು ಸಾವಿರ (೫೦೦೦೦) ಮರಗಳು ಧರೆಗುರುಳುತ್ತವೆ ! ಇಲ್ಲಿ ಸಾಲುಮರದ ತಿಮ್ಮಕ್ಕ ನವರು ಬಿಬಿಸಿ ಯ ವಿಶ್ವದ ೧೦೦ ದಿಟ್ಟ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ ! ನಮ್ಮ ಘನ ಸರ್ಕಾರ ಎರಡನ್ನೂ ಸಮರ್ಥಿಸಿಕೊಂಡು ಹಿಗ್ಗುತ್ತದೆ !


ಒಕ್ಕಲೆಬ್ಬಿಸಿದ ಮನುಷ್ಯನಿಗೆ ಕೆಲವೊಮ್ಮೆ ಸರ್ಕಾರ ಜಮೀನನ್ನೋ, ಮನೆಯನ್ನೋ ಅಥವಾ ಕಾಸನ್ನೋ ಕೊಡುತ್ತದೆ ! ಕೆಳಗೆಬಿದ್ದ ಈ ಮರಗಳಲ್ಲಿ ಆಶ್ರಯ ಪಡೆಯುತ್ತಿದ್ದ ಗುಬ್ಬಿಗಳು ಎಲ್ಲಿಗೆ ಹೋಗುತ್ತವೆ ? ಏನು ಮಾಡುತ್ತವೆ ? ಊರಿಂದ ಓದಿಸಿದಿವಿ ಕಾಡಿಗೆ ಬಂದವು ಈಗ ಕಾಡಿನಿಂದ ???



References 

http://timesofindia.indiatimes.com/articleshow/55596266.cms

http://timesofindia.indiatimes.com/city/bengaluru/Saalumarada-Thimmakka-in-BBCs-100-Women-list/articleshow/55573030.cms

http://m.dailyhunt.in/news/india/english/news+karnataka-epaper-newskarn/western+ghats+to+lose+30+000+trees+to+make+way+for+byrapura+shishila+road+project-newsid-60717063










Wednesday, 9 November 2016

ನಮ್ಮ ನಡೆ " ದೇವರಾಯನ ದುರ್ಗದ ಕಡೆ " !


ಹೀಗೆ ನಾವು ಟಾಮ್ ಅವರನ್ನ ಕುರುಚಲುಕಾಡಿಗೆ ಕರೆದುಕೊಂಡು ಹೋಗುವುದೆಂದಾದಮೇಲೆ ಒಂದು ಗಾಡಿ ಮಾಡುವುದು ಎಂದಾಯಿತು ( ಕಾರು). ಭಾನುವಾರದ ಬೆಳ್ಳಂಬೆಳಿಗ್ಗೆ ಡ್ರೈವರ್ ನಮ್ಮನ್ನ ಪಿಕಪ್ ಮಾಡಿದಮೇಲೆ ನೇರ ಟಾಮ್ ಅವರ ಹೋಟೆಲ್ ವೈಟ್ ಫೀಲ್ಡ್ ನ "ಪಾಮ್ ಮೆಡೋಸ್ " ಗೆ ಹೋದೆವು. ಈ ಪಾಮ್ ಮೆಡೋಸ್ ಯುರೋಪಿಯನ್ ಶೈಲಿಯ ಸಾಲು ಸಾಲು ವಿಲ್ಲಾಗಳಿರುವ ಗೇಟೆಡ್ ಕಮ್ಯೂನಿಟಿ , ವೈಟ್ ಫೀಲ್ಡ್ ನ ಉಸಿರುಗಟ್ಟಿಸುವ ಬೀದಿಗಳಲ್ಲಿ ಹಣವುಳ್ಳವರ ಐಷಾರಾಮಿ ಜಗತ್ತು ! ಒಳ ಹೋದರೆ  ಯೂರೋಪ್ ನಲ್ಲೆ ಇರುವಹಾಗೆ ಅನ್ನಿಸುತ್ತದೆ ಹೊರಬಂದರೆ "ಬೀಡಿ ಬೆಂಕಿ ಪೊಟ್ಟಣ ದುಕಾನ್  ! "

ಪಾಮ್ ಮೇಡೋಸ್ ನ ಪಕ್ಕದಲ್ಲೇ "ಜಾಗೃತಿ" ಥೀಯೇಟರ್ ಇದೆ ! ಬೆಂಗಳೂರಿನಲ್ಲಿ ಹವ್ಯಾಸಿ ರಂಗ ಭೂಮಿಯ ಒಂದು ಛಾಪು ಇದು ! ಒಳಗಡೆಯ ಸೆಕ್ಯೂರಿಟಿಯನ್ನೆಲ್ಲ ದಾಟಿ "ಟಾಮ್ " ರನ್ನ ಕಾರಿನಲ್ಲಿ ಕರೆದುಕೊಂಡಮೇಲೆ ರಿಂಗ್ ರೋಡ್ನಮೂಲಕ ತುಮಕೂರಿನ ಕಡೆಗೆ ಹೊರಟೆವು. ದಾರಿಯುದ್ದಕೂ ಟಾಮ್ " how much time will it take to get out of the city ? !" ಅಂತಲೇ ಕೇಳುತ್ತಿದ್ದರು ! ನಾನು " considerable amount of time !" ಅಂತಷ್ಠೆ ಹೇಳಿ ನಗುತ್ತಿದ್ದೆ !

ಕಾರು ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಾವರಿಸಿಕೊಂಡು ಸುಮಾರು ಒಂದೂವರೆ ಗಂಟೆಗಳಾದಂತರ ಗೊರಗುಂಟೆ ಪಾಳ್ಯಕ್ಕೆ ಬಂದು ಮೇಲ್ಸೇತುವೆ ಏರಿದನಂತರ " Oh we hit the highway !" ಅಂದರು ಟಾಮ್ !  ಇವರು ಅಮೆರಿಕಾವನ್ನು ಬಹಳಷ್ಟು ಟೀಕಿಸುತ್ತಾರೆ ! ಅದರ ದ್ವಂದ್ವ ನೀತಿಗಳನ್ನು ಯಾವುದೇ ಭಿಡೆಯಿಲ್ಲದೆ ಚರ್ಚಿಸುತ್ತಾರೆ !
ನಾನು ಸುಮ್ಮನೆ ಹಾಗೆ " ನೀವು ಮೂಲ ಅಮೆರಿಕನ್ನರಾ ?" ಎಂದು ಕೇಳಿದೆ !
ಅದಕ್ಕವರು " ಇಲ್ಲ ನಾವು ಜರ್ಮನಿಯ ಜ್ಯೂಇಶ್ ಮೂಲದವರು , ೨೦೦ ವರ್ಷಗಳ ಹಿಂದೆ ಅಮೇರಿಕಾಗೆ ವಲಸೆ ಬಂದೆವು" ಅಂದರು !
ನನಗೆ ನನ್ನ ಗೆಳೆಯ ಹೇಳುತ್ತಿದ್ದ ಮಾತು ನೆನೆಪಾಯಿತು  " ಜ್ಯೂಗಳ IQ ಮತ್ತು ಮೂಗು ಎಲ್ಲರಿಗಿಂತ ಹೆಚ್ಚು, ಅಲ್ಲದೆ ಅವರು ಅಮೆರಿಕಾದ ನೀತಿಗಳ ಪ್ರಭಲ ವಿಮರ್ಶಕರು  !"

ಟಾಮ್ ರ ಮೂಗು ಉದ್ದವಾಗಿತ್ತು , IQ ಬಗ್ಗೆ ಹಿಂದಿನ ಬರಹದಲ್ಲೇ ವಿವರಿಸಿದ್ದೇನೆ, ಅಮೆರಿಕಾದ ದ್ವಂದ್ವ ನೀತಿಗಳ ಬಗ್ಗೆ ಮೇಲೆ ಹೇಳಿಯಾಗಿದೆ ! ಹಾಗೆ ಹೀಗೆ ಮಾತು ಹೊರಳಾಡುತ್ತಿದಾಗ ಕಾರು ದಾಬಸ್ಪೇಟೆಯ ಹತ್ತಿರಕ್ಕೆ ಬಂತು. ನಾನು ಡ್ರೈವರ್ ಗೆ ಫ್ಲೈಓವರ್ ನ ಕೆಳಗೆಹೋಗಿ ಬಲಗಡೆ ತಿರುಗುವುದು ಎಂದಿದ್ದಕ್ಕೆ ಆವಾS " ಇಂಟರ್ನ್ಯಾಷನಲ್ ಏರ್ಪೋರ್ಟ್ ರೂಟು ಅಲ್ವಾ ಸಾರ್ ? ಗೊತ್ತು ಬಿಡಿ " ಅಂದ !

ನಾನು " ಏರ್ಪೋರ್ಟ್ ಅಲ್ಲಪ್ಪ ! ಇನ್ನೊಂದು ದಾರಿಯಿಂದ ಹೋಗಬೇಕು 'ದೇವರಾಯನ ದುರ್ಗದ ಕಡೆಗೆ ' " ಅಂದೆ !
"ಆಯ್ತು ಬಿಡಿ " ಅಂದದ್ದು ಕೇಳಿಸಿತು !

ಹೀಗೆ ಸಾಗುವಾಗ ದೂರದಿಂದ ಕುರುಚಲುಕಾಡಿನ ಮರಗಿಡಗಳು, ಎಡಬಲದಲ್ಲಿ ಹಸಿರು ಹೊಲಗಳು , ಅಲ್ಲಲ್ಲಿ ನೀಲಗಿರಿ , ಮಾವು, ಹಲಸು ಕಾಣತೊಡಗಿತು. ಟಾಮ್ ರ ಎದೆಬಡಿತ ಹೆಚ್ಚಾದಂತೆ ಅನಿಸಿತು ! ಆಗಾಗ ಕಾರುನಿಲ್ಲಿಸಿ ಹತ್ತಿರದಿಂದ ಮರಗಳನ್ನು ನೋಡುತ್ತಿದ್ದರು. ನಾನು " ಬನ್ನಿ ಇವೇ  ಮರಗಳು ಮುಂದೂ ಕಾಣಸಿಗುತ್ತವೆ "ಅಂದೆ , ಸುಮ್ಮನಾದರು !

ಅವರ ಒಂದು ಪ್ರಶ್ನೆ ಹೀಗಿತ್ತು " ಈ ಮರಗಳೇಕೆ ಎತ್ತರಕ್ಕಿಲ್ಲ ? ಕುಬ್ಜವಾಗಿವೆ !"

ನಾನು " ಕಾಡಿನಲ್ಲಿ ಎತ್ತರದ್ದ ಮರಗಳಿವೆ " ಎಂದೆ

"let us see " ಅಂದರು !

ಮದ್ಯಾಹ್ನದ ಹೊತ್ತಿಗೆ ದೇವರಾಯನ ದುರ್ಗ ತಲುಪಿದೆವು, ದೇವರಗುಡಿಗೆ ಹೋಗಿ ನರಸಿಂಹನಿಗೆ ಮುಖತೋರಿಸಿ , ಟಾಮ್ ಅವರ ಹಣೆಗೆ ಕುಂಕುಮ ಏರಿಸಿ "ಗರುಡಗಂಭದ ಕಡೆಗೆ " ಹೊರಟೆವು ! ದೇವೆರಾಯನ ದುರ್ಗದ ಬೆಟ್ಟದ ತುತ್ತತುದಿಯಲ್ಲಿ ಗರುಡಗಂಭವಿದೆ ಅಲ್ಲಿಗೆ ಸುಮಾರು ಜನ "ಚಾರಣಕ್ಕೆ" ಹೋಗುವುದುಂಟು ಮತ್ತು ಅಲ್ಲಿಂದ ಇಡೀ " ನಾಮಚಿಲುಮೆ-ದೇವರಾಯಣದುರ್ಗದ " ಕಾಡು ಕಾಣಸಿಕ್ಕುತ್ತದೆ , ಸುರುಳಿ ಸುರುಳಿ ಯಾಗಿರುವ ರಸ್ತೆಗಳು ಕಾಡಿಗೆಸುತ್ತಿದ ಸರ್ಪಗಳಂತನಿಸುತ್ತವೆ ! ನಾವೆಲ್ಲರೂ ಸುಲಭವಾಗಿ ಹತ್ತಿದೆವು,  ಇನ್ನೇನು ' ಕಂಭ ' ಕಾಣಸಿಗುತ್ತಿದೆ ಎನ್ನುವಷ್ಟರಲ್ಲಿ ದೊಡ್ಡದೊಂದು ಬಂಡೆ ಎದುರಾಯಿತು.

ಇದು ಮೇಲ್ಮುಖವಾಗಿದ್ದುದ್ದರಿಂದ ಹತ್ತುವುದು ಕೊಂಚ ಕಷ್ಟ ಅನ್ನಿಸಿತು, ನಾವು ಹೇಗೋ ತೆವಳಿ ಹತ್ತಿ ಮೇಲೆ ಬಂದೆವು              ' ಟಾಮ್ ' ನಿಧಾನವಾಗಿ ಕವಚಿಕೊಂಡು ಹತ್ತುತ್ತಿದ್ದರು. ಅವರಿಗೆ ೫೮ ಆಗಿತ್ತು , ಸಹಾಯಹಸ್ತ ಚಾಚಿದ್ದಕ್ಕೆ "ಬೈದರು" !
ಒಳ್ಳೆ ಸಹವಾಸ ವೆಂದು ನಾವೂ ಸುಮ್ಮನಾದೆವು !
ಮೇಲೆ ಹತ್ತಿಬಂದವರು ಸುಮ್ಮನೆ ಸುತ್ತಲೂ ಒಮ್ಮೆ ನೋಡಿದರು  ತಣ್ಣನೆ ಗಾಳಿ, ಕಣ್ಣು ಚುಚ್ಚುವ ಹಸಿರು ಕಾಡು, ಕಾಲ ಕೆಳಗಿನ ದೈತ್ಯ ಬಂಡೆ, ಆಗಾಗ ಹತ್ತಿರ ಬರಲು ಯತ್ನಿಸುವ ಮಂಗಣ್ಣಗಳು, ಮೇಲೆ ಬಂದ ಖುಷಿ ಮತ್ತು ತೃಪ್ತಿ ಅವರ ಕಣ್ಣಿನಲ್ಲಿತ್ತು!

" Its amazing !" ಅಂದರು.
ನಾನು " you will see more" ಎಂದೆ.
" sure i will  " ಅಂದರು.

ನಾವು ಅಲ್ಲಿಂದ ಹೊರಟು ನಾಮಚಿಲುಮೆ ತಲುಪಿದೆವು ದಾರಿಯಲ್ಲಿ ಅಲ್ಲಲ್ಲಿ ಐದಾರು ಬಾರಿ ಕಾರು ನಿಲ್ಲಿಸಿ ಟಾಮ್ ದೈತ್ಯ ಮರಗಳನ್ನು ಅಡಿಯಿಂದ ಮುಡಿಯವರೆಗೆ ನೋಡುತ್ತಿದ್ದರು. ರಸ್ತೆಯ ಬಳಿಯೇ ಇದ್ದ ಮರಗಳನ್ನು ಮುಟ್ಟಿ ಏನನ್ನೋ ಅನುಭವಿಸುತ್ತಿದ್ದರು, ನನಗದು ನಿಲುಕಲಿಲ್ಲ ! ಅವರು ಕೇಳಿದ ಮರಗಳ ಹೆಸರುಗಳು ನನಗೆ ಗೊತ್ತಿರಲಿಲ್ಲ ಅತ್ತಿ , ಆಲ,ಹೊನ್ನೆ , ಬೀಟೆ , ನೀಲಗಿರಿ , ಹಲಸು, ಮಾವು, ಗಂಧ , ತೇಗ ಇಷ್ಟೇ ಗೊತ್ತಿರುವ ನಾನು ಕಾಡಮರಗಳನ್ನು ಹೇಗೆ ತಾನೇ ಬಲ್ಲೆ !

ಆದರೂ ನಾನು ಅವರಿಗೆ " ಸಾಲು ಮರದ ತಿಮ್ಮಕ್ಕ " ನವರ ಬಗ್ಗೆ ಹೇಳಿದೆ , ಮಕ್ಕಳಿಲ್ಲದೆ ಮರಗಳನ್ನು ಬೆಳೆಸಿ-ನೀರುಣಿಸಿ-ಪೋಷಿಸಿ-ಹಿರಿದಾಗಿಸಿ ಸಾರ್ಥಕ್ಯ ಕಂಡುಕೊಂಡ ಕಥೆ ಯಾರ ಮನ ಕಲುಕುವುದಿಲ್ಲ ಹೇಳಿ ? ಟಾಮ್ ಕೊಂಚ  ಭಾವುಕರಾದರು ಅನ್ನಿಸಿತು ! 

ನಾಮಚಿಲುಮೆಯ ಉದ್ಯಾನದ ಒಳಹೊಕ್ಕ ನಾವು ಮೊದಲಿಗೆ ಜಿಂಕೆಯವನಕ್ಕೆ ಹೋದೆವು . ಮದ್ಯಾಹ್ನದ ಸಮಯವಾಗಿದ್ದರಿಂದ ಹತ್ತಾರು ಜಿಂಕೆಗಳು ಹತ್ತಿರದಲ್ಲಿಯೇ ಇದ್ದವು ! ದಾರಿಹೋಕರ ಕೈಲಿದ್ದ ಸೌತೆ , ಬಾಳೆಹಣ್ಣುಗಳ ಮೇಲೆ ಅವುಗಳ ಕಣ್ಣು !  ಮಂಗಣ್ಣಗಳನ್ನು ಬಿಟ್ಟರೆ ಇಲ್ಲಿರುವ ಏಕೈಕ ಪ್ರಾಣಿಸಂಕುಲವೆಂದರೆ ಅದು ಜಿಂಕೆಗಳದ್ದು, ಇಲ್ಲಿ ದಶಕಗಳಿಂದ ನೂರಾರು ಜಿಂಕೆಗಳು ಹಾಯಾಗಿವೆ ಮತ್ತು ಹಲವಾರು ಸಂಘ ಸಂಸ್ಥೆಗಳು ಇವುಗಳನ್ನು ದತ್ತು ಪಡೆದು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ !
ಇಲ್ಲಿನ ಇನ್ನೊಂದು ಆಕರ್ಷಣೆಯೆಂದರೆ ನಾಮಚಿಲುಮೆ ! ವನವಾಸದಲ್ಲಿದ್ದ ರಾಮ ಸೀತೆ ಮತ್ತು ಲಕ್ಷ್ಮಣರು ಇಲ್ಲಿಗೆ ಬಂದಾಗ ಸೀತೆಗೆ ತಿಲಕವಿಡುವ ಸಂಧರ್ಭ ಬರುತ್ತದೆ, ಹತ್ತಿರದಲ್ಲೆಲೂ ನೀರಿರದಕಾರಣ ರಾಮನು ಬಾಣಹೂಡಿ ಬಂಡೆಯನ್ನು ಸೀಳುತ್ತಾನೆ, ಆಗ ಚಿಮ್ಮಿದ ನೀರಿನಿಂದ  ಸೀತೆಗೆ ತಿಲಕವನ್ನಿಟ್ಟ  ಆದ ಕಾರಣ ಹೆಸರು ನಾಮಚಿಲುಮೆ ಎಂದಾಗಿದೆ !
ಇಲ್ಲಿ ಬಂಡೆಯ ಮೇಲೆ ಒಳಕಲ್ಲಿನ ಮಾದರಿಯಲ್ಲಿ ಪುಟ್ಟ ರಂದ್ರವಿದೆ ಮತ್ತು ಅದರಿಂದ ನಿರಂತರ ನೀರು ಜಿನುಗುತ್ತದೆ ! ಇದರ ಬಗ್ಗೆಯೂ ' ಟಾಮ್ ' ರವರಿಗೆ ವಿವರಿಸಿದಾಗ ಮಾತು ನಂಬಿಕೆ, ಧರ್ಮ, ದೇವರು, ಪ್ರಕೃತಿಯ ಕಡೆ ಹೊರಳಿತು !

ನಾನು ನನಗನ್ನಿಸಿದ್ದನ್ನು ಹೇಳಿದೆ ' ಟಾಮ್ ' ತಾವು ' ಚರ್ಚಿಗೆ ' ಹೋಗದ ಕ್ರಿಶ್ಚಿಯನ್ ಎಂದೂ ತಮ್ಮ ನಂಬಿಕೆಗಳೆಲ್ಲವೂ ತುಂಬಾ ' ಪರ್ಸನಲ್ ' ಅದುವೆಂದೂ ಹೇಳುತಿದ್ದಾಗ  ನಾನು ಗೌರವದಿಂದ ಕೇಳುತ್ತಿದ್ದೆ !

ಬೆಂಗಳೂರಿಂದ ದೂರ, ಕಾಡುಮಧ್ಯೆ, ಜಿಂಕೆಗಳ ನಡುವೆ, ರಾಮನ ಚಿಲುಮೆಯ ಪಕ್ಕದಲ್ಲಿ, ಮರದ ಕೆಳಗೆ ಕೂತು ಜ್ಯೂಯಿಶ್ ಮೂಲದ ಅಮೆರಿಕನ್ ಒಬ್ಬರ ಜೊತೆ ಮಾಡಿದ ತೆರೆದ ಹೃದಯದ ಧಾರ್ಮಿಕ ಚರ್ಚೆ ಮರೆಯಲಾಗದಂತಹುದು !
ಸಮಯ ನಾಲಕ್ಕಾಗುತ್ತಿತ್ತು ಟಾಮ್   "what next ? " ಎಂದು ಕೇಳಿದರು !

ನಾನು " ಸಿದ್ಧಗಂಗೆ ! " ಎಂದೆ !
















Sunday, 16 October 2016

ಇದು ಬರಿ ಮರವಲ್ಲೋ ಅಣ್ಣಾ ದೇವರ ಕೃಪೆ ಕಾಣೋ !!!

( ಎಡದಿಂದ ಬಲಕ್ಕೆ : ಮೊದಲನೆಯವರು_ದರ್ಶನ್ , ಮೂರನೆಯವರು_ಟಾಮ್ ಗೂಗನ್ ಹ್ಯಾಮ್ )

ಇತ್ತೀಚೆಗೊಂದು ಅಂಕಣ ಓದಿದೆ ಮರಗಳ ಬಗ್ಗೆ , ಅದರ ವಿಶೇಷವೆಂದರೆ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ತಲಾವಾರು ಮರಗಳೆಷ್ಟಿವೆ ಎಂಬುದರ ಬಗ್ಗೆ ಮಾಹಿತಿಯಿತ್ತು . ಕೆನಡಾದಲ್ಲಿ ವ್ಯಕ್ತಿಯೊಬ್ಬನಿಗೆ ೮೦೦೦ ಮರಗಳಿದ್ದರೆ ಅಮೇರಿಕಾದಲ್ಲಿ ಅದು ೪೦೦ ರಕ್ಕೆ ಕುಸಿದಿದೆ , ಹಾಗೆಯೇ ಚೀನಾದಲ್ಲಿ ೧೨೦ ಇದ್ದರೆ ಭಾರತದಲ್ಲಿ ಕೇವಲ ೨೮ !

ಅಮೆಜಾನ್ ಕಾಡುಗಳನ್ನು ಬಿಟ್ಟರೆ ವಿಶ್ವದಲ್ಲೇ ಅತ್ಯಂತ ಜೀವವೈವಿಧ್ಯವಿರುವ ಕಾಡುಗಳು ಭಾರತದಲ್ಲಿವೆ ಅದರಲ್ಲೂ ನಮ್ಮ ಪಶ್ಚಿಮಘಟ್ಟದ ಕಾಡುಗಳು ಈ ವಿಷಯದಲ್ಲಿ ಮುಂದಿವೆ. ಆದರೆ ಜಗತ್ತಿನ ಎಲ್ಲ ಭಾಗಗಳಲ್ಲಿ  ದಿನವೊಂದಕ್ಕೆ ಸಾವಿರ ಸಾವಿರ ಹೆಕ್ಟೇರುಗಳಷ್ಟು ಕಾಡುಗಳು ನಾಶವಾಗುತ್ತಿವೆ ! 

ತೇಜಸ್ವಿಯವರು ಅಮೆಜಾನ್ ಕಾಡುಗಳ ಬಗ್ಗೆ ಬರೆದಿರುವ ಪ್ರಬಂಧದಲ್ಲಿ  ಹೀಗಿದೆ " ಒಂದುವೇಳೆ ಅಮೆಜಾನ್ ಕಾಡುಗಳ ವೈಮಾನಿಕ ಸಮೀಕ್ಷೆ ನಡೆಸಿದರೆ ನೂರಾರು ಬುಲ್ಡೋಸೆರ್ ಗಳು ಏಕಕಾಲಕ್ಕೆ ದಟ್ಟಾರಣ್ಯ ವನ್ನು ನೆಲಕ್ಕೆ ಉರುಳಿಸುತ್ತಿರುವುದು ಕಾಣಸಿಗುತ್ತದೆ " ಎಂಬುದು. ಹಾಗೆಯೇ ಪಶ್ಚಿಮ ಘಟ್ಟಗಳ ಬಗೆಗಿನ "ಮೇದರಹಟ್ಟಿಯ ಅವಸಾನ" ದಲ್ಲಿಯೂ ಕಾಡಿನ , ಮರಗಳ ಮತ್ತು ಮನುಷ್ಯ ಸಂಭಂದಗಳ ಬಗ್ಗೆ ಆತೀ ಸೂಕ್ಷ್ಮ ಗ್ರಾಹಿಯಾಗಿ ಬರೆದಿದ್ದಾರೆ ! ಕಾರಣ ಸರಳ ಮರವಿದ್ದರೆ ಮನುಷ್ಯ , ಹಕ್ಕಿ, ಪಕ್ಷಿ , ಪ್ರಾಣಿ ಸಂಕುಲ , ಸರೀಸೃಪ ಇಲ್ಲದಿದ್ದರೆ ವೈಪರೀತ್ಯ  ಮತ್ತು ವಿಕೋಪ !

ಇನ್ನು ಬೆಂಗಳೂರಿನ ವಿಚಾರಕ್ಕೆ ಬಂದರೆ ದಶಕಗಳ ಹಿಂದೆ ಒಬ್ಬ ವ್ಯಕ್ತಿಗೆ    ಮರಗಳಿದ್ದುದು  ಈಗ ವ್ಯತಿರಿಕ್ತ ವಾಗಿ ಐದು ಮನುಷ್ಯರಿಗೆ ಒಂದು ಮರವಿದೆಯಂತೆ  ! ಅಂದರೆ ಕೆಲವೇ ದಶಕಗಳಲ್ಲಿ ಮರಗಳಸಂಖ್ಯೆ ಹತ್ತರಷ್ಟು ಕಡಿಮೆಯಾಗಿರುವುದು. ಇದು ಅಭಿವೃದ್ಧಿಯ, ಅಪಾಯದ ಮುನ್ಸೂಚನೆಯ, ಅತಿಯಾಸೆಯ ಹೆಸರಿನಲ್ಲಿ ಆಗಿರುವಂಥಹುದು. 
ಕೆಲವೊಮ್ಮೆ ಒಂದುಕಡೆ ಮರಕಡೆದು ಅದಕ್ಕಿಂತಾ ಹೆಚ್ಚು ಸಸಿಗಳನ್ನು ಬೇರೊಂದು ಕಡೆ ನೆಡುತ್ತೇವೆಂದು ಹೇಳಿ ಕೈತೊಳೆದು ಕೊಳ್ಳುವ ಕೆಟ್ಟ ಮತ್ತು ಅವೈಜ್ಞಾನಿಕ ಮಾದರಿಯನ್ನು ನಾವು ಅನುಸರಿಸಿದ್ದೇವೆ ! ಸಸಿಗಳ್ಳನ್ನು ನೆಟ್ಟರೆ ಮುಗಿಯಿತು ಅದಕ್ಕೆ ಒಂದುದಿನವೂ ನೀರು ಹಾಕದವರು "ನೆಟ್ಟ ದೊಡ್ಡಸ್ತಿಕೆ " ತೋರಿಸಿಕೊಂಡು " This tree is planted by so and so " ಎಂದು ಬರೆಸಿಕೊಂಡು ಖುಷಿಪಡುತ್ತೇವೆ !

ಹೀಗಿರುವಾಗ ಒಂದು ಸಂಗತಿ ನೆನಪಿಗೆ ಬರುತ್ತಿದೆ. 

ಬಹುಷಃ ಐದಾರು ವರ್ಷಗಳ ಹಿಂದಿನ ಮಾತು, ಪಶ್ಚಿಮ ಘಟ್ಟದಲ್ಲಿ ಶ್ರೀಗಂಧದ ಮರಗಳ್ಳರನ್ನು ಪೊಲೀಸರು ರಾತ್ರೋ ರಾತ್ರಿ ಗುಂಡಿಕ್ಕಿ ಕೊಂದರು. ನಾವು ಮರುದಿನ ಆಫೀಸಿನಲ್ಲಿ ಕೆಲಸಮಾಡುತ್ತಿದ್ದಾಗ 'ಧಡಾರೆಂದು' ಬಾಗಿಲನ್ನು ದೂಡಿಕೊಂಡು ಬಂದ    ' ಟಾಮ್ ಗೂಗನ್ ಹ್ಯಾಮ್ ' ಏರಿದ ಧ್ವನಿಯಲ್ಲಿ " your country is great " ಎಂದರು ! ಅವರ ಕೈಲಿ ಅಂದಿನ " ಟೈಮ್ಸ್ ಆ ಇಂಡಿಯಾ " ಪತ್ರಿಕೆಯಿತ್ತು ಮತ್ತು ಅವರು ಅದರಲ್ಲಿ ಪ್ರಕಟವಾದ " ಶ್ರೀಗಂಧದ ಮರಗಳ್ಳರನ್ನು  ಗುಂಡಿಕ್ಕೆ ಕೊಂದ  ಪೊಲೀಸರು" ಎಂಬ ಅಂಕಣ ವನ್ನು ಓದಿದ್ದರು ! 
' ಟಾಮ್ ' ನಮ್ಮ ಕಂಪನಿಯ ಅತ್ಯಂತ ಹಿರಿಯ ವಿಜ್ಞಾನಿಗಳಲೊಬ್ಬರು. ರಸಾಯನಶಾಸ್ತ್ರ ದಲ್ಲಿ ಡಾಕ್ಟ್ರೇಟ್ ಪದವಿ ಪಡೆದು ೬೦ ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಹೊಂದಿ ಹಲವಾರು ಪ್ರತಿಷ್ಠಿತ ಜರ್ನಲ್ ಗಳ್ಳಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಪ್ರಕಟಿಸಿ ಇತ್ತೀಚೆಗೆ nitration ನ ಬಗೆಗೆ ಪುಸ್ತಕವೊಂದನ್ನು ಬರೆದು ಪ್ರಕಟಿಸಿರುವವರು ! ಎಲ್ಲದಕ್ಕಿಂತಾ ಮುಖ್ಯವಾಗಿ ಅವರು ಅಮೆರಿಕಾದ  ' ಮೌಂಟ್ ವರ್ನನ್ ' ನಲ್ಲಿ ದಶಕಗಳ ಹಿಂದೆ ಹೆಕ್ಟೇರುಗಳಷ್ಟು ಜಮೀನು ಖರೀದಿಸಿ ಸಸಿಗಳನ್ನು ನೆಟ್ಟದ್ದರಿಂದ ಈಗ ಅದು ೫೦೦೦ ಮರಗಳ ಕಾಡು ! ಅವರಲ್ಲಿ ನರ್ಸರಿ ನಡೆಸುತ್ತಾರೆ, ಅಲ್ಲಿಗೆ ಬರುವವರಲ್ಲಿ ಮರಗಳ ಬಗ್ಗೆ , ತಳಿಗಳ ಬಗ್ಗೆ , ಕಾಡಿನ ಅವಶ್ಯಕತೆಯ ಬಗ್ಗೆ ಮನದಟ್ಟು ಮಾಡಿಕೊಟ್ಟು ಸಸಿಯನ್ನೂ ಕೊಡುತ್ತಾರೆ  ! 
ಅಷ್ಟೇ ಅಲ್ಲದೆ ಅಮೆರಿಕಾದ ತಮ್ಮ ಗೆಳೆಯರೊಡಗೂಡಿ " Tree Army " ಸ್ಥಾಪಿಸಿ ಅವೈಜ್ಞಾನಿಕ, ಅಪ್ರಸ್ತುತ ಮರ ಕಡಿಯುವಿಕೆ ಕಂಡುಬಂದಲ್ಲಿ ಅಂತಹ ಸ್ಥಳಕ್ಕೆ ಧಾವಿಸಿ ಅದನ್ನು ವಿರೋಧಿಸುತ್ತಾರೆ !

( ಭಾರತದಿಂದ ಕೆಲಸದಮೇಲೆ ಹೋಗುವ ನನ್ನ ಸಹೋದ್ಯೋಗಿಗಳೆಲ್ಲರೂ ಅವರ ಕಾಡನ್ನು ನೋಡಿ ಅಚ್ಚರಿಪಟ್ಟಿದ್ದಾರೆ ! ನನಗೆ ಇನ್ನೂ ಆ ಭಾಗ್ಯ ಸಿಗದಿದ್ದರಿಂದ ಕೆಲವೊಮ್ಮೆ ಹೊಟ್ಟೆ ಕಿಚ್ಚಾಗುತ್ತದೆ ! )

ಅಂತಹವರಿಗೆ ಶ್ರೀಗಂಧದ ಮರದ ಕೇಸು ಅತ್ಯಂತ ಖುಷಿ ಪಡಿಸಿದಂತೆ ಕಂಡಿತು ! ಮರಕಡಿ(ಕದಿ)ಯುವವರನ್ನು ಗುಂಡಿಕ್ಕಿ ಕೊಲ್ಲುವ ನಿಮ್ಮ ದೇಶದ " ಕಾನೂನು ಮತ್ತು ಸುವ್ಯವಸ್ಥೆ " ಉತ್ಕೃಷ್ಟವಾದುದು ಎಂದರು ! ಅಷ್ಟಕ್ಕೇ ಸುಮ್ಮನಿದ್ದರೋ ?  ಇಲ್ಲ ! ಆ ಅಂಕಣವನ್ನು ಸ್ಕ್ಯಾನ್ ಮಾಡಿ ತಮ್ಮ "Tree Army " ಗೆ ಮೇಲ್ ಮಾಡಿದರು ! ಕೆಲವು ಗಂಟೆಗಳ್ಳಲ್ಲಿ ಅವರ ಮೇಲ್ ಬಾಕ್ಸ್ ತುಂಬಿತ್ತು ಮತ್ತು ಅಮೆರಿಕಾದ ಅವರ ಮಿತ್ರರು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು ! ನಾವೆಲ್ಲಾ ಈ ವಿಷಯಕ್ಕೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಅವಕ್ಕಾಗಿದ್ದರೂ ' ಹುಸಿ ಗರ್ವ ' ಪ್ರದರ್ಶಿಸುತ್ತಿದ್ದೆವು !

ಅದೇ 'ಟಾಮ್ ' ಅವರನ್ನು ಕಳೆದ ಎರಡು ವರ್ಷಗಳ ಹಿಂದೆ ಭೇಟಿ ಮಾಡಿದಾಗ ( ಬೆಂಗಳೂರಿನಲ್ಲೇ !) ಕೃಷ್ಣಗಿರಿ -ಧರ್ಮಪುರಿ ಕಾಡಿನಲ್ಲಿ ಕೆಂಪು ಚಂದನ ( Red sandal ) ವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಪೋಲೀಸರ ಕೈಗೆ ಸಿಕ್ಕು ಬಲಿಯಾದ ಎಂಟು ಜನರಬಗ್ಗೆ ಹೇಳಿದೆ, ಅವರ ಆನಂದಕ್ಕೆ ಪಾರವೇ ಇರಲಿಲ್ಲ ! ಆ ಅಂಕಣದ ಲಿಂಕನ್ನು ಪಡೆದು ಅದನ್ನೂ ಅವರ ಸ್ನೇಹಿತರೊಂದಿಗೆ ಹಂಚಿಕೊಂಡರು. 

ಸಾಧಾರಣವಾಗಿ ವಿದೇಶದಿಂದ ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬರುವವರು ಮೈಸೂರು ಅರಮನೆ ಇತ್ಯಾದಿ ನೋಡಲು ಬಯಸಿದರೆ ' ಟಾಮ್ ' ಬಂದಾಗಲೆಲ್ಲಾ ಜಲಪಾತ , ನದಿ , ಹೊಳೆದಂಡೆ ಮತ್ತು ಕಾಡುಗಳನ್ನು ನೋಡಲು ಬಯಸುತ್ತಾರೆ. ಕಳೆದ ಬಾರಿ ಬಂದಾಗಲೂ ಅದೇ ಆದ್ದು.  " ನಿಮ್ಮ ಕಾಡುಗಳನ್ನು ನಾನು ನೋಡಿಲ್ಲ ಹೋಗಿ ಬರೋಣವೇ ?" ಅಂದರು. 
ನಾನು " ಎರಡು ದಿನಗಳಾದರೂ ಬೇಕು " ಎಂದೆ ! ಅವರಿಗೆ ಅಷ್ಟು ಸಮಯ ಇರದಿದ್ದುದರ ಕಾರಣ " ಒಂದು ದಿನದಮಟ್ಟಿಗೆ ಹತ್ತಿರದಲ್ಲಿ ಯಾವುದಾದರೂ ಕುರುಚಲು ಕಾಡಿಲ್ಲವೇ ?" ಎಂದು ಕೇಳಿದರು. ನನಗೆ ಆಗ ಥಟ್ಟನೆ ಹೊಳೆದದ್ದು ನಮ್ಮೂರಿನ       " ನಾಮಚಿಲುಮೆ-ದೇವರಾಯನದುರ್ಗ" ದ ಕಾಯ್ದಿಟ್ಟ ಅರಣ್ಯ ! ಅಲ್ಲಿಗೆ ಹೋಗುವುದೆಂದು ನಿರ್ಧರಿಸಿದೆವು !  









Tuesday, 30 August 2016

"ದಿ ಹಿಂದೂ " ಪತ್ರಿಕೆಯಲ್ಲಿ ಒಂದು ಕಾರ್ಟೂನು

ಹಲವಾರು ವರ್ಷಗಳ ಹಿಂದೆ "ದಿ ಹಿಂದೂ " ಪತ್ರಿಕೆಯಲ್ಲಿ ಒಂದು ಕಾರ್ಟೂನು ಪ್ರಕಟವಾಗಿತ್ತು. ಅದರಲ್ಲಿ ಮಧ್ಯವಯಸ್ಕನೊಬ್ಬ ಬೃಹದಾಕಾರದ ಮರವೊಂದರ ಮೇಲೆ ಹತ್ತಿ ಅದರ ಕೊಂಬೆಯೊಂದರ ಮೇಲೆ ಕಾಲನಿಟ್ಟು ಕೊಡಲಿಯಿಂದ ಅದನ್ನು ಕಡಿಯುತ್ತಿದ್ದ ! ಬಹುಷಃ ಇಂದಿನ ನಮ್ಮ ಪರಿಸ್ಥಿತಿಯೂ ಹಾಗೆಯೇ ಇದೆ ಅಥವಾ ಅದಕ್ಕಿಂತಾ ಬಿಗಡಾಯಿಸಿದೆ ! ಈ ಭೂಮಂಡಲವು ಅಸ್ಥಿತ್ವಕ್ಕೆ ಬಂದ ಕೋಟ್ಯಾನುಕೋಟಿ ವರ್ಷಗಳಿಂದ ಭೂಮಿಯ ಸರಾಸರಿ ತಾಪಮಾನ ಒಂದು ಸಮತೋಲನವನ್ನು ತಂತಾನೇ ಕಾಪಾಡಿಕೊಂಡು ಬಂದಿದ್ದು ಇತ್ತೀಚೆಗಿನ ನೂರು ವರ್ಷಗಳಲ್ಲಿ ಅದು ಎರಡು ಡಿಗ್ರೀ ಸೆಲ್ಸಿಎಸ್ ನಷ್ಟು ಹೆಚ್ಚಾಗಿದೆ ! ಇನ್ನು ಸಮುದ್ರದಮೇಲೆ ಹೆಪ್ಪುಗಟ್ಟಿರುವ ಮಂಜುಗಡ್ಡೆಯ ಪರ್ವತಗಳು ಕರಗಲು ಇರುವುದು ಎರಡು ಡಿಗ್ರೀ ಸೆಲ್ಸಿಎಸ್ ನಷ್ಟು ಗಡುವು ಅಷ್ಟೇ !

ಮೊನ್ನೆ ಮೊನ್ನೆಯಷ್ಟೇ ಚೀನಾ ಬಿಡುಗಡೆಗೊಳಿಸಿದ ವರದಿಗಳ ಪ್ರಕಾರ "ಬಿಜಿಂಗ್" ನಗರ  ೧೯೨೦ ರಿಂದ ಈಚೆಗೆ ಹಲವು ಅಡಿಗಳಷ್ಟು ಕುಸಿದಿದೆಯಂತೆ ! ಅಂದರೆ ಅಷ್ಟೇ ಅಡಿಗಳಷ್ಟು ಸಾಗರದ ನೀರು ಮೇಲೆ ಬಂದಿರಬೇಕಲ್ಲವೇ ? ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ  ದೇಶಗಳಾದ ಅಮೇರಿಕಾ , ಚೀನಾ , ಭಾರತದಂತಾ ರಾಷ್ಟ್ರಗಳ ವಾಟರ್ ಸೈಕಲ್ ನಲ್ಲಿ ಭಾರಿ ವ್ಯತ್ಯಯ ಕಂಡು ಬರುತ್ತಿದೆ ಮತ್ತು ಇದನ್ನು ಸ್ಯಾಟೆಲೈಟ್ ಇಮೇಜಿಂಗ್ನ ಸಹಾಯದಿಂದ ನಾವು ಯಾವಾಗಲೋ ಪತ್ತೆ ಹಚ್ಚಿದ್ದೇವೆ !

ಮಳೆ ನೀರು ಭೂಮಿಯೊಳಗೆ ಇಂಗುವುದು ಒಂದು ಪಾಲಾದರೆ ಭೂಮಿಯಿಂದ ನಾವು ಎಳೆದುಕೊಳ್ಳುವ ಪಾಲು ಹತ್ತರಷ್ಟು!
ಪ್ರಪಂಚ ನಗರ ಕೇಂದ್ರಿತವಾಗುತ್ತಿರುವುದರಿಂದ ಭೂಮಿಯೊಳಗಿನ ಅಂತರ್ಜಲದ ಕೋವೆಗಳು ಸಣ್ಣ ಸಣ್ಣ ಜಲಾಶಯಗಳು ಅತೀ ವೇಗವಾಗಿ ಬರಿದಾಗುತ್ತಿವೆ. ವಿಶ್ವದ ಹತ್ತು ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಹಲವು  ನಗರಗಳು ಇದ್ದು ಈ ವಿಷಯ ಈ ಬಾರಿಯ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಚರ್ಚೆಯ ವಿಷಯವೂ ಆಗಿದೆ !
ಕಾಡುಗಳು ಎಂದಿನಂತೆ ಈ ವರ್ಷವೂ ಎಲ್ಲ ದೇಶಗಳಲ್ಲಿ ಕಡಿಮೆಯಾಗುತ್ತಿದ್ದು ಅದರ ಪುನರುಜ್ಜೇವನ ಕಾರ್ಯ ಸರಿಯಾಗಿ ನೆಡೆಯುತ್ತಿಲ್ಲ. ಎಬೋಲಾ ದಂತಹಾ ಮಾರಣಾಂತಿಕ ವೈರಸ್ ಮನುಷ್ಯನ ಸಹವಾಸಕ್ಕೆ ಬಂದಿರುವುದೂ ಇದೇ  ಕಾರಣಕ್ಕೆ  !

ಬೀಜಿಂಗ್ ನಗರದಲ್ಲಿ ವಾಹನ ಸಂದಣೆ ಹೆಚ್ಚಿರುವ ಹೊತ್ತಿನಲ್ಲಿ ಯಾರೂ ಫೇಸ್ ಮಾಸ್ಕ್ ಇಲ್ಲದೆ  ಹೊರಗಡೆ ಬೀದಿಗಳಲ್ಲಿ ಓಡಾಡುವಂತಿಲ್ಲ ಎಂದು ಅಲ್ಲಿನ ಸರ್ಕಾರವೇ ಹುಕುಂ ಹೊರಡಿಸಿದೆ ! ನಮ್ಮದೇ ನವದೆಹಲಿಯಲ್ಲಿ ಮುಂಜಾವಿನ ಸ್ಮಾಗ್ ( ಸ್ಮೋಕ್ + ಫಾಗ್ ) ನಿಂದಾಗಿ ಉಸಿರಾಟದ ತೊಂದರೆಗಳು ಹೇರಳವಾಗಿ ವರದಿಯಾಗುತ್ತಿವೆ ! ಇಲ್ಲಿಯವರೆವಿಗೂ ವಾಟರ್ ಪ್ಯೂರಿಫೈಯೆರ್ ಮತ್ತು AC ಗಳನ್ನ ಹಾಕಿಸಿಕೊಳ್ಳುತ್ತಿದ್ದ ನಾವುಗಳು ಈಗ ಏರ್ ಪ್ಯೂರಿಫೈಯೆರ್ ಗಳ ಮೊರೆಹೋಗಿದ್ದೇವೆ !
ಕಳೆದ ವರ್ಷವಷ್ಟೇ ಈ ಯಂತ್ರ ಗಳು amazon ಮತ್ತು flipkart ಮುಂತಾದ e -commerce platform ಗಳಿಂದ ಬಿಸಿ ಕೇಕಿನ ತರಹ ಬಿಕರಿಯಾಗಿವೆ !

ಅಣುಬಾಂಬಿನ ಅಟ್ಟಹಾಸಕ್ಕೆ ನಲುಗಿದ್ದ ಹಿರೋಷಿಮಾ -ನಾಗಾಸಾಕಿಯ "ಜಪಾನ್" ದೇಶ ಫುಕುಶಿಮಾ ಅಣುಸ್ಥಾವರದಿಂದ ಸೋರಿಕೆಯಾದ radioactive material ನಿಂದಾಗಬಹುದಾದ ಆನಾಹುತಗಳನ್ನು ಮನಗಂಡು ಅಣುಸ್ಥಾವರಗಳ ಮುಂದುವರಿಕೆಯ ಬಗೆಗೆ ಗಂಭೀರ ಚಿಂತನೆ ನೆಡೆಸಿದೆ ! ೨೦೫೦ ಕ್ಕೆ ಮುಗಿದೇಹೋಯಿತು ಎನ್ನುತ್ತಿದ್ದ ತೈಲ ಬೇರೆಬೇರೆ ರೀತಿಯಲ್ಲಿ ಸಿಗತೊಡಗಿದೆ. ಅಮೇರಿಕಾ ದೇಶ ಕೊಲ್ಲಿ ರಾಷ್ಟ್ರಗಳಿಂದ ಅಹಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಕಳೆದ ಆರೆಂಟು ವರ್ಷಗಳಲ್ಲಿ ೩೦ ಪ್ರತಿಶತ ಕಡಿಮೆಯಾಗಿದೆ ಮತ್ತು ಈ ಕೊರತೆಯನ್ನು ಅಮೆರಿಕಾದ ಹಿತ್ತಲ ತೈಲ shale oil ಮತ್ತು shale gas ನೀಗಿಸುತ್ತಿದೆ ! ಕೆನಡಾದ ಸಾಗರದಾಳದಲ್ಲಿ ಮತ್ತಷ್ಟು ತೈಲಪತ್ತೆಯಾಗಿದೆ, ಬ್ರೆಜಿಲ್ಬನ ಸಾಗರದಲ್ಲಿ ಮರಳಿನ ಜೊತೆಗೆ ತೈಲ ಬೆರೆತಿದೆ ! ಅಮೇರಿಕಾ ಕಲ್ಲಿದ್ದಲ ಗಣಿಗಳನ್ನು ಮುಚ್ಚುತಾ ಬಂದರೆ ಭಾರತ , ಚೀನಾ , ಕೆನಡಾ ಮತ್ತು ಆಸ್ಟ್ರೇಲಿಯಾದಂತಹಾ ರಾಷ್ಟ್ರಗಳು ಕಲ್ಲಿದ್ದಲಿನ ಗಣಿಗಾರಿಕೆ ಯನ್ನು ಹೆಚ್ಚಿಸಿವೆ ! ಇದರಿಂದ fossil fuel ನ ಮೇಲಿನ ನಮ್ಮ ಅವಲಂಬನೆ ಹೆಚ್ಚಾಗುತ್ತಾ ಹೋಗಿ ಇತರೆ ನಿರುಪದ್ರವಿ ಶಕ್ತಿಗಳಾದ ಗಾಳಿ ಮತ್ತು ಜಲ ವಿದ್ಯುತ್ , ಸೌರ ಶಕ್ತಿಯ ಮೇಲಿನ ನಮ್ಮ ಗಮನ ಮಾಸುತ್ತಿದೆ !

ಎಲ್ಲೆಡೆ ಮಣ್ಣು ತನ್ನ ಪಲವತ್ತತೆಯನ್ನು ಕಳೆದುಕೊಂಡು ಇನ್ನಷ್ಟು ಮತ್ತಷ್ಟು ರಸಗೊಬ್ಬರ ಮತ್ತು ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳನ್ನು  ಆಗ್ರಹಿಸುತ್ತಿದೆ ! ಭಾರತದಂತಹಾ ಸಮಶೀತೋಷ್ಣ ದೇಶದಲ್ಲಿ ಬೇಸಿಗೆಯಲ್ಲಿ ಅತೀವೃಷ್ಟಿಯಾದರೆ ಮಳೆಗಾಲದಲ್ಲಿ ಬಿಸಿಲು ಝಳಪಿಸುತ್ತಿದೆ ! ಮಳೆ ,ಚಳಿ ಮತ್ತು ಬೇಸಿಗೆಯ ಬಂದಿರುವಿಕೆಯಲ್ಲಿ ಭಾರಿ ವ್ಯತ್ಯಯ ಕಾಣುತ್ತಿದೆ. ಇವೆಲ್ಲವೂ ಭಾರಿ ಪ್ರಮಾಣದ ಧಾರಣಾ ಶಕ್ತಿಯಿರುವ ಭೂಮಿಗೆ ಸುಲಭದ ಮಾತಲ್ಲದಿದ್ದರೂ ನಮ್ಮ ಇನ್ನೂರು ಮುನ್ನೂರು ವರ್ಷಗಳ ಅದರಲ್ಲೂ ಕೈಗಾರಿಕಾ ಕ್ರಾಂತಿಯಿಂದ  (industrial revolution) ಈಚೆಗಿನ ಮನುಕುಲದ  ವ್ಯವಹಾರಗಳು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ !

ಹಸಿ ತರಕಾರಿಗಳಲ್ಲಿ ಕೀಟನಾಶಕಗಳಿದ್ದರೆ packed ಫುಡ್ ನಲ್ಲಿ ರಾಸಾಯನಿಕ preservatives ಇರುತ್ತದೆ ! ಅಂತರ್ಜಲಕ್ಕೆ ಮಳೆನೀರಿಗಿಂತ  ಪರಿಷ್ಕರಿಸದೇ ಬಿಟ್ಟ ಕಲುಷಿತ ನೀರೇ ಸೇರಿಕೊಳ್ಳುತ್ತಿದೆ !  ಬೆಂಗಳೂರಿನಂತಹ ನಗರಗಳ ಅದರಲ್ಲೂ ನೀರಿಗಾಗಿ ಅಂತರ್ಜಲವನ್ನೇ ಅವಲಂಭಿಸಿರುವ ಪ್ರದೇಶಗಳಲ್ಲಿ ಜನರಿಗೆ ಅಲರ್ಜಿ,ಮೂಗು ಸೋರಿಕೆ, ಕಣ್ಣಿನ ತೊಂದರೆ ಯಂತಹಾ ಖಾಯಿಲೆಗಳು  ಸಾಮಾನ್ಯವಾಗಿಬಿಟ್ಟಿವೆ ಮತ್ತು ಇದನ್ನು ಅಲ್ಲಿನ ಸುತ್ತಮುತ್ತಲಿನ ಆಸ್ಪತ್ರೆಗಳು ದೃಢಪಡಿಸಿವೆ !

ಇನ್ನು ವರ್ತೂರು ಕೆರೆಯ ಹಾರುವ ನೊರೆ, ಆನೇಕಲ್ಲಿನ ಬೋರಿನಲ್ಲಿ ಬರುವ ಕೆಂಪನೆಯ ನೀರು, ಚಂದಾಪುರದ ಹೊಲಗಳಲ್ಲಿ ಅಲ್ಲಲಿ ಹತ್ತುವ ಬೆಂಕಿ (ಇದು ಅಂತರ್ಜಲದ  ಕಲುಷಿತ ನೀರಿನಿಂದ ಹೊರಬರುವ methane gas  ಬಿಸಿಲಿನ ತಾಪಕ್ಕೆ ಹೊತ್ತಿಕೊಳ್ಳುವ ಪರಿ ),ಬೆಳ್ಳಂದೂರು ಕೆರೆಯಲ್ಲಿ ಸತ್ತ ಪಕ್ಷಿ-ಮೀನುಗಳು, ನಮ್ಮ ಕಸವಿಲೇವಾರಿಯ ನಿಷ್ಕ್ರಿಯತೆಯನ್ನು ನಮ್ಮ  ಮೀಡಿಯಾಗಳಲ್ಲದೆ washington post , newyork times ಗಳೂ ಕೊಂಡಾಡಿವೆ !

ನಾವು ಅವಿವೇಕಿಗಳಂತೆ ಚಿನ್ನದ ಮೊಟ್ಟೆಇಡುವ ಪ್ರಕೃತಿಯ ಗರ್ಭವನ್ನು ಅತಿಯಾಸೆಯಿಂದ ಕೊಯ್ಯುತ್ತಿದ್ದೇವೆ ! ದುಂಬಿ ಹೋಗುವವರೆಗೂ ಕಾಯದೆ ಅದನ್ನು ಸಾಯಿಸಿ ಜೇನುತುಪ್ಪವ ಕೀಳುತ್ತಿದ್ದೇವೆ ! ಪ್ರಕೃತಿಯು ಲಕ್ಷಕೋಟಿವರ್ಷಗಳಿಂದ ಕಾಪಾಡಿಕೊಂಡು ಬಂದ ಸಮತೋಲನವನ್ನು (ecological balance ) ಆಗಲೇ ಅದೂ ಬರೀ ಇನ್ನೂರು ಮುನ್ನೂರು ವರ್ಷಗಳಲ್ಲೇ ಮುರಿದಿದ್ದೇವೆ ! ನೀರನ್ನು ಬಾಟಲಿಯಿಂದ ಕುಡಿದು , ಗಾಳಿಯನ್ನು ಯಂತ್ರದಿಂದಪಡೆದು , ತರಕಾರಿಗಳನ್ನು ರಾಸಾಯನಿಕಗಳಿಂದ ತೊಳೆದು ಕೃತಾರ್ಥರಾಗುತ್ತಿದ್ದೇವೆ !